ನಲವತ್ತು
ನಾ ಕರೆದಾಗ ಬರಲಿಲ್ಲವೇಕೆ ಕಾಯಜಪಿತ ನೀನು ||ಪ||
ನಾ ಕರೆದಾಗಲು ನೀ ಬಾರದೆಯಿದ್ದರೆ
ಈ ಕರುಣಾಕರನೆಂಬ ಬಿರುದು ನಿನಗೇಕೊ ರಂಗ ||ಅ.ಪ||
ಭಾರಿ ಮಡುವಿನಲಿ ಘೋರ ಮಕರ ತಾ
ಕರಿದಂತಿ ಕಾಲ ಪರಿಯೊಳೆಳೆಯುತಿರೆ
ನರಳಾಡುತಿರಲು ಮೊರೆಯನ್ನು ಕೇಳಿ
ತ್ವರಿತದಿಂದಲಿ ಪೊರೆಯಲು ಬಂದವ ||ನಾ ಕರೆದಾಗ||
ಹಿರಣ್ಯಕನ ಸುತ ತರಳ ಪ್ರಹ್ಲಾದ
ಹರಿಹರಿ ಎನುತಿರೆ ಪರಿತಪಿಸಿ ಪಿತನು
ಸೆರೆಮನೆಯೊಳಿಕ್ಕೆ ತರಿದು ರಕ್ಕಸನ
ಸ್ಥಿರಪದವಿತ್ತು ಪೊರೆದ ನರಹರಿಯೆ||ನಾ ಕರೆದಾಗ||
ಕರವನು ಮುಗಿದೆನು ಮರೆಯದೆ ನಿನ್ನಡಿ-
ಗೆರಗುತನುದಿನವು ದುರಿತ ಸಾವಿರದ
ಸೈರಿಸಲಾಗದ ಉರಿಯನಾರಿಸೈ
ಹರಿ ಮಾತರೀಶ ವರವಿಠಲರಾಯ||ನಾ ಕರೆದಾಗ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ